-->

ಸುರೇಂದ್ರನಾಥ ಅವರ ‘ಎನ್ನ ಭವದ ಕೇಡು’

MadhuNews | Monday, June 9, 2025

ಕೃತಿಕಾರರಾದ ಸುರೇಂದ್ರನಾಥರನ್ನು ಮಾತ್ರವಲ್ಲ, ನನ್ನನ್ನೂ ಈ ಕಾದಂಬರಿ ‘ದಿಕ್ಕುತಪ್ಪಿಸಿದೆ, ಅಚ್ಚರಿಗೊಳಿಸಿದೆ’. ಸ್ವತಃ ಲೇಖಕನಿಗೇ ಹೀಗಾಗುವುದು ಗದ್ಯದ ಬರವಣಿಗೆ ಕಾವ್ಯಗಂಧಿಯಾದಾಗ. ತನ್ನನ್ನೇ ತಾನು ಮೀರುವಂತೆ ಬರೆಯುವ, (ಬರೆಸಿಕೊಳ್ಳವ) ಸೃಷ್ಟಿಯಲ್ಲಿ ಮಾತ್ರ ಗದ್ಯ ಕಾವ್ಯಗಂಧಿಯಾಗುವುದು. ಹೀಗೆ ಬರೆಯುವ ಕ್ರಿಯೆಯಲ್ಲಿ ಸೋಲೂ ಉಂಟು, ಗೆಲುವೂ ಉಂಟು. ಕೇವಲ ಕಥೆ ಹೇಳುವುದು ಹಾಗೂ ಹೀಗೂ ಒಪ್ಪಿಗೆಯಾಗಿ ಬಿಡುತ್ತದೆ. ಆದರೆ ಸುರೇಂದ್ರನಾಥರು ರಿಸ್ಕ್ ತೆಗೆದುಕೊಂಡು ಬರೆಯುವವರು.

ಸುರೇಂದ್ರನಾಥರು ವಿಮರ್ಶೆಯ ವ್ಯಾಖ್ಯಾನಕ್ಕೆ ಸಿಗದಂತೆ ಇಲ್ಲಿ ಕಥೆಯನ್ನು ಬೆಳೆಯಲುಬಿಟ್ಟಿದ್ದಾರೆ. ಪ್ರಾರಂಭದಲ್ಲೇ ರಾಧನ ನಾಲ್ಕನೇ ಮಗಳು ಕರಿಬೇವು, ಕೊತ್ತಂಬರಿ, ಉಳ್ಳಾಗಡ್ಡಿಯ ವಾಸನೆ ಹೊತ್ತು ಅಡುಗೆ ಮನೆಯಲ್ಲಿ ಹುಟ್ಟುತ್ತಾಳೆ. ಈ ಕಣ್ಣೀರಿನ ಸರಸ್ವತಿ ಕಾದಂಬರಿಯುದ್ದಕ್ಕೂ ಅಡುಗೆ ಮನೆಯ ವಾಸನೆಗಳಲ್ಲಿ ನಮಗೆ ನಿಜವಾಗಾಗುತ್ತಾ ಹೋಗುತ್ತಾಳೆ.

ಇನ್ನು ದಟ್ಟ ಬಿಳಿಗೂದಲಿನ ಮಾಮಿಯೋ-ಮಾಮಿಯಂಥ ಮಾಮಿ ಅವಳು. ಅವಳ ರೂಪ, ಅವಳ ನಿಲುವು, ಅವಳ ಹಠ, ಅವಳ ರಾಕ್ಷಸೀಯವಾದ ಸೌಂದರ್ಯ ಎಲ್ಲವೂ ಅವಳನ್ನು ಒಂದು ಪೌರಾಣಿಕ ಪಾತ್ರವಾಗುವಂತೆ ಮಾಡಿವೆ. ಅವಳಲ್ಲಿ ಅತೀಂದ್ರಿಯವಾದ ಶಕ್ತಿಯಿದೆ. ಬರಲಿರುವ ಸಾವನ್ನು ಅವಳು ಮೂಸಿ ತಿಳಿಯಬಲ್ಲಳು. ಸಾಮಾಜಿಕವಾಗಿ, ಸಾಂಸಾರಕವಾಗಿ, ಸಾಂಸ್ಕೃತಿಕವಾಗಿಯೂ ನಾವು ನಮಗೆ ಗೊತ್ತಿದೆಯೆಂದು ಭ್ರಮಿಸುವ ಕಾಮದ ಆದಿಮ ರೂಕ್ಷಸ್ವರೂಪವನ್ನ ಅಂದರೆ ನಮಗೆ ಗೊತ್ತಿರುವುದರ ಆಚಿನದನ್ನು, elemental ಎನಿಸುವುದನ್ನು, ದಿಗಿಲು ಹುಟ್ಟಿಸುವಂತೆ ಮಾಮಿ ತನ್ನಲ್ಲೇ ತೋರುತ್ತ ಮಾಯಾವಿಯಂತೆ ಇಡೀ ಕಾದಂಬರಿಯ ಲೋಕವನ್ನು ಆಳುತ್ತಾಳೆ. ಅವಳ ಜಾಯಮಾನವೇ ಅದು. ಅದಕ್ಕೆ ಕಾರಣದ ಹಂಗಿಲ್ಲ. ಸಂಸಾರದಲ್ಲೂ, ಹೊಟೇಲು ವ್ಯವಹಾರದಲ್ಲೂ, ಪಂಪಾಪತಿ ಸ್ನೇಹದಲ್ಲೂ ಪಳಗಿ, ಹಣ್ಣಾಗಿ, ಒಣಗಿ ಸಾಯುತ್ತಿರುವ ಗಂಡನ ಜೊತೆ ಸಂಭೋಗಿಸುವ ಈ ಮಾಮಿ ವಾಸ್ತವ ಪಾತ್ರವೇ ಎಂದು ಈ ಲೋಕದ ನಾವು ಸಂಶಯಗ್ರಸ್ತರಾಗುವುದು ಸಹಜವೇ. ಆದರೆ ಕಾವ್ಯಕ್ಕೆ ಸಹಜವಾದಿ ವಿಪರೀತಗಳಲ್ಲಿ, ಉತ್ಪ್ರೇಕ್ಷೆಗಳಲ್ಲಿ ಕಾದಂಬರಿಯ ಎಲ್ಲಾ ಪಾತ್ರಗಳೂ ಮೈದಾಳುವುದರಿಂದ ಕೃತಿಕಾರ ತೆಗೆದುಕೊಳ್ಳುವ ರಿಸ್ಕಿನಲ್ಲಿ ನಾವೂ ಭಾಗಿಯಾಗುತ್ತೇವೆ. ಕಥೆಯಲ್ಲಿರುವ ಈ ಪ್ರಪಂಚ ನಮ್ಮ ಪ್ರಪಂಚದ ಪ್ರತಿಯಲ್ಲ. ಅದು ಇನ್ನೊಂದೇ ಪ್ರಪಂಚ. ಅದರ ಲಾಜಿಕ್ಕೇ ಬೇರೆ.

ಕಾದಂಬರಿಯ ಉದ್ದಕ್ಕೂ ನಮ್ಮನ್ನು ಕಾಡುವ ವಾಸನೆಗಳೂ ಈ ಬಗೆಯ ವಾಸ್ತವದ ಉಲ್ಲಂಘನೆಗಳಿಗೆ ಸಹಾಯಕವಾಗುತ್ತವೆ. ನಮ್ಮ ಮೂಗಿಗೆ ಬಡಿಯುವ ನಾಗಲಿಂಗಪುಷ್ಪ, ಕರಿಬೇವುಗಳು ವರ್ಣಿತವಾಗುವ ಜಾಗಗಳನ್ನು ಕಾದಂಬರಿಯ ಉದ್ದಕ್ಕೂ ನಾಣು ಗುರುತಿಸಿಕೊಂಡು ಓದಿದ್ದೇನೆ. ಕಾಯಕಲ್ಪದ ಚಿಕಿತ್ಸೆಯ ಗಿಡಿಮೂಲಿಕೆಗಳ ಅಭ್ಯಂಜನಗಳ ವಾಸನಾಪ್ರಪಂಚವೂ ಕಾದಂಬರಿಯುದ್ದಕ್ಕೂ ಇದೆ-ಅಮರತ್ವದ ಬಯಕೆಯ ಮಾಮಿಯ ಸ್ನಾನಗಳು ಇವು.

ಇಂಥ ಒಂದು ಲೋಕದಲ್ಲಿ ದಾವಣಗೆರೆಯ ವಿಲಕ್ಷಣ ರಾಜಕಾರಣಿ ಪಂಪಾಪತಿ ಕೂಡ ಇದ್ದಾರೆ. ಒಂದು ಹೊಟೇಲನ್ನು ನಡೆಸುವ ವಾಸ್ತವ ವಿವರಗಳೂ ಇವೆ. ಒಂದು ಊರಾಗಿ ದಾವಣಗೆರೆಯೂ ಇದೆ. ಕಾರ್ಮಿಕ ಸಂಘರ್ಷದ ರಾಜಕಾರಣವೂ ಇದೆ. ನಮಗೆ ಗೊತ್ತಿರುವ ಲೋಕದಲ್ಲೇ ಗೊತ್ತಿಲ್ಲದ್ದು ನಡೆಯುವ ಸೋಜಿಗ ಈ ಕಾದಂಬರಿಯ ಶೈಲಿಯ ಮುಖ್ಯ ಲಕ್ಷಣ.

ನಾವು ನಿರೀಕ್ಷಿಸಿದಂತೆ ಕಾದಂಬರಿ ಬೆಳೆಯುವುದಿಲ್ಲ. ದಾರಿತಪ್ಪಿ ಕಾಡಿನಲ್ಲಿ ಓಡಾಡಿದಂತೆ ಕೆಲವೊಮ್ಮೆ ಭಾಸವಾಗುತ್ತದೆ. ನಾವು ಓದುಗರು ಮಾತ್ರವಲ್ಲ; ಲೇಖಕರೂ ನಡೆದಾಡುವ ಬಗೆ ಇದು. ಭಾಷೆಯನ್ನು ಕಾದಂಬರಿಯ ಭಾವದ ತೀವ್ರತೆಗೆ ಹುರಿಗೊಳಿಸುವದರಲ್ಲಿ ಸುರೇಂದ್ರನಾಥರು ಅತಿರೇಕಗಳಿಗೆ ಹಿಂಜರಿಯುವುದಿಲ್ಲ. ಆದರೆ ಇದು ನನಗೆ ಅತಿಯಾಯಿತು ಎನ್ನಿಸಿ ಕೃತಿಕಾರ ತನ್ನನ್ನೇ ತಾನು ಹುರಿದುಂಬಿಸಿ ಕೊಂಡಂತೆ ಕೆಲವು ಕಡೆ ಭಾಸವಾಗಿದೆ. ಇದು ಕೃತಿಕಾರರ ಮೊದಲ ಕಾದಂಬರಿಯಲ್ಲವೆ? ಮೌನಕ್ಕೆ ಅವಕಾಶವಿಲ್ಲದ ಉಮೇದು, ಆತುರ, ನಿರಂಬಳವೆನ್ನಿಸಬೇಕಾದ ಕಾದಂಬರಿಯ ಸಾಂಗತ್ಯದಲ್ಲಿ ಕೊಂಚ ಅತಿಯೆನ್ನಿಸಬಹುದು.

‘ಎನ್ನ ಭವದ ಕೇಡು’ ರಾಕ್ಷಸ ವರ್ಚಸ್ಸಿನ ಮತ್ತು ಛಲದ ಮಾಮಿಯ ಸುತ್ತ ಹೆಣೆದಿರುವ ಒಂದು ಸ್ತ್ರೀಲೋಕ. ಈ ಮಾಮಿಯೂ ಹಿಂದೊಂದು ಕಾಲದಲ್ಲಿ ಒಬ್ಬ ಹುಡುಗನನ್ನು ಪ್ರೀತಿಸಿದ್ದಳು ಎಂಬುದನ್ನು ಸರಸ್ವತಿ ಗುಟ್ಟಾಗಿ ತಿಳಿಯುತ್ತಾಳೆ. ಇದರಿಂದ ತಾನು ದ್ವೇಷಿಸುವ ಮಾಮಿ ಅವಳಿಗೆ ಇನ್ನಷ್ಟು ಗೂಢವಾಗುತ್ತಾಳೆ. ನಮಗೆ ಮಾಮಿ ಮನಃಶಾಸ್ತ್ರದ ವಿಶ್ಲೇಷಣೆಗೆ ದಕ್ಕಬಲ್ಲ ಪಾತ್ರವಿರಬಹುದು ಎಂದು ಒಂದು ಕ್ಷಣ ಅನ್ನಿಸುತ್ತದೆ. ಆದರೆ ಒಂದು ಕ್ಷಣ ಮಾತ್ರ.

ಎಲ್ಲರೂ ಸತ್ತು ಕೆಟ್ಟು ಬೃಂದಾವನ ಬರಿದಾದ ಮೇಲೂ ಬೆನ್ನು ಮುರಿದ ಬಿಳಿಗೂದಲಿನ, ದೊಣ್ಣೆ ಹಿಡಿದ ಮಾಮಿ ಮಾತ್ರ ಉಳಿದಿರುತ್ತಾಳೆ. ಈ ಮಾಮಿ ನಮ್ಮ ಅನುಭವಕ್ಕೆ ತರುವ ಜೀವಕಾಮದ ಸುತ್ತಮುತ್ತಲೂ ಸಾವು ಇದೆ; ಗೋದಾವರಿಗೆ ಹುಚ್ಚು ಹಿಡಿಸುವ ಸಂಗೀತ ಇದೆ; ಸರಸ್ವತಿಯ ಅಡುಗೆ ಕಾಯಕವಿದೆ. ಹಲವು ವಾಸನೆಗಳಿವೆ. ‘ವಾಸನ” ಎನ್ನುವ ವಿಶೇಷವಾದ ಅರ್ಥದಲ್ಲೂ ಇರುವ ವಾಸನೆ ಇದು.
‘ಕೂಡಲ ಸಂಗನ ಶರಣರ ಅನುಭಾವದಿಂದ ಎನ್ನ ಭವದ ಕೇಡು ನೋಡಯ್ಯಾ’ ಎಂಬ ವಚನದಿಂದ ಕಾದಂಬರಿ ತನ್ನ ಶೀರ್ಷಿಕೆಯನ್ನು ಪಡೆದಿದೆ. ಕಾದಂಬರಿ ಲೋಕದ ‘ಭವ’ ಎಷ್ಟು ತೀವ್ರವಾದ್ದೆಂದರೆ ಅದರ ತೀವ್ರತೆಯೇ ಅದರ ಕೇಡೆಂದು ನಮಗೆ ಅನ್ನಿಸುವಂತಿದೆ. ಅನುಭಾವಕ್ಕೆ ಆಸ್ಪದವಿಲ್ಲದ ದಟ್ಟ ಭವದ ವಾಸನೆಯ ಕೃತಿ ಇದು.

ತಾರ್ಕಿಕವಾಗಿ ನಾವು ತಿಳಿದು ಬದುಕುವ ಈ ಸಂಸಾರದ ಲೋಕದಲ್ಲಿ ನಮಗೆ ತಿಳಿಯದಂತೆ ಉರಿಯುವ ಸತ್ಯಗಳನ್ನು ದರ್ಶಿಸುವ ಈ ಕಾದಂಬರಿ ತನ್ನ ಉದ್ದೇಶದಲ್ಲಿ ಸಾರ್ಥಕವಾಗಿದೆಯೇ? ಸ್ಪಷ್ಟವಾದ ಒಂದು ಉದ್ದೇಶವಿಟ್ಟುಕೊಂಡು ಬರೆದ ಕೃತಿ ಇದು ಎಂದು ಹೇಳುವುದು ಕೂಡ ಸರಿಯೇ? ಇತ್ಯಾದಿ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಎದ್ದಿರುವಂತೆ ಓದುಗರಲ್ಲೂ ಏಳಬಹುದು. ಪ್ರತಿ ಓದುಗನೂ ತನ್ನದೇ ಅರ್ಥ ಕಟ್ಟಿಕೊಳ್ಳುವಂತೆ ಈ ಕೃತಿ ಇದೆ ಎಂದು ನನಗನ್ನಿಸಿದೆ.

ಹೀಗೇ ಕೊನೆಯ ಮಾತೆಂದು ಅನ್ನಿಸುವಂಥ ಮಾತಿನಿಂದ ನಾನು ಈ ಕಾದಂಬರಿಯ ಒಟ್ಟು ಅನುಭವವನ್ನು ವರ್ಣಿಸುವುದು ಸರಿಯಲ್ಲ. ಯಾಕೆಂದರೆ ಈ ಬಗೆಯ ಬರವಣಿಗೆಯಲ್ಲಿ ಲೇಖಕನಾಗಿ ನನಗೊಂದು ಸಮಸ್ಯೆಯಿದೆ. ಅರವತ್ತರ ದಶಕದಲ್ಲಿ ಗೋಪಾಲಕೃಷ್ಣ ಅಡಿಗರಿಂದ ಪ್ರೇರಿತನಾದ ನನ್ನಂಥವರು ಹುಡುಕುತ್ತ ಇದ್ದುದು “ಸಾವಯವ ಶಿಲ್ಪದ ಸಮಗ್ರೀಕರಣ” ಬಲ ಹೊಂದಿದ ಕೃತಿಗಳಿಗೆ. ಚೆಲ್ಲಿಕೊಳ್ಳುವ ಸಮೃದ್ಧಿಯಿಂದ ಅತೃಪ್ತರಾಗದ ಹೊರತು, ತೋರಿಕೊಳ್ಳುವ ಶೈಲಿಗಳಿಂದ ಮುಕ್ತರಾಗದ ಹೊರತು ಈ ಬಗೆಯ ಪ್ರಬಂಧ ಧ್ವನಿ ಪಡೆದ ಕೃತಿ ನಿರ್ಮಾಣ ಅಸಾಧ್ಯ. ಶಿಲ್ಪದಂತಹ ಕೃತಿಯಲ್ಲಿ ಏನಾದರೂ ಕೊಂಚ ಕಮ್ಮಿ ಅನ್ನಿಸಿದರೆ ತೀರಾ ಕಮ್ಮಿ. ಕೊಂಚ ಹೆಚ್ಚೆನ್ನಿಸಿದರೆ ತೀರಾ ಹೆಚ್ಚು.
ಆದರೆ ನಮ್ಮ ಜನಪ್ರಿಯ ಸಿನಿಮಾ ನೋಡಿ. ಅದರ ಕುತೂಹಲ ಕಟ್ಟುವ ಕಥನದಲ್ಲೂ ಎಷ್ಟು ಹಾಡುಗಳು ನುಸುಳಿಕೊಳ್ಳುತ್ತವೆ! ಹಾಗೆಯೇ ಕಥೋಪಕಥೆಗಳ ಅಲೆದಾಟವೆನ್ನಿಸುವ ನಮ್ಮ ಪುರಾಣಕಾವ್ಯಕತೆಗಳೂ, ಗದ್ಯಪದ್ಯ ಮಿಶ್ರವಾದ ಚಂಪೂ ಕಾವ್ಯಗಳೂ ಕನ್ನಡದ ಪ್ರಧಾನ ರಾಜಮಾರ್ಗವೇ ಇರಬಹುದು.

ಸುರೇಂದ್ರನಾಥರೂ ಒಂದು ಚಂಪೂ ಕೃತಿಯನ್ನೇ ಇಲ್ಲಿ ಬರೆದಂತೆ ತೋರುತ್ತದೆ.
ಇಲ್ಲವಾದರೆ, ನಾನು ಬಹುವಾಗಿ ಮೆಚ್ಚಿರುವ ಶಾವಿಗೆಯ ತಯಾರಿಯಂಥ ಹಲವು ಲಿರಿಕಲ್ ವರ್ಣನೆಗಳಿಗೆ ಸಾವು ನೋವು ಪ್ರೇಮದ, ಉನ್ಮಾದದ, ಹೊಟೇಲ್ ಉದ್ಯಮದ ದೈನಿಕದ ಈ ಕಥನದಲ್ಲಿ ಜಾಗವೇ ಇರುತ್ತಿರಲಿಲ್ಲ.

 ಮಲ್ಲಗೀತೆ

ಒಳ್ಳಿತಾಗುವುದೆಲ್ಲ!
ಬೇವು ತುದಿಯಲಿ ಬೆಲ್ಲ!
ಮುಂದೆ ನಡೆ, ತೀರ್ಥವಿಹುದೆಲ್ಲ ಹಾದಿಗಳು ಕೂಡುವೆಡೆಯಲ್ಲಿ!
ಬೆಳ್ಳಗಿರೆ ಹಾಲಲ್ಲ;
ಬಲ್ಲವನೆ ತಾ ಬಲ್ಲ;
ಕೇಳಯ್ಯ ನಾನೊಬ್ಬ ಮಲ್ಲನೀ ಜೀವನದ ಗರಡಿಯಲ್ಲಿ!
ಕಾವಿಯೋ ಖಾದಿಯೋ?
ಅಂತವೋ ಆದಿಯೋ?
ಯಾವುದೋ ಹಾದಿಯೊಂದನು ಹಿಡಿದು ನಡೆಯಲಿದ್ದೆಡೆಯೆ ಸಿದ್ಧಿ!
ಎಲ್ಲ ನದಿಗಳು ತುದಿಗೆ
ಜಾರುವುವು ಜಲನಿಧಿಗೆ
ಎಂಬ ತತ್ವವ ತಿಳಿದು ಸಮತೆಯಲಿ ಸಾಗುವುದೆ ಯೋಗಬುದ್ಧಿ!
ಸೋದರನೆ ಬಿಸಿಲಿಹುದೆ?
ಹಾದಿಯಲಿ ಕೆಸರಿಹುದೆ?
ಹೊರೆ ಭಾರವಾಗಿದೆಯೆ? ನೆರೆಯ ಕರೆದವನ ಕೈಗದನು ನೀಡು.
ನಿದ್ದೆಗಳೆದಾ ವೇಳೆ
ಮತ್ತೆ ಬೆನ್ನಿನ ಮೇಲೆ
ಹೊತ್ತು ನಡೆ ಕರ್ತವ್ಯವನು; ಮರಳಿ ಬಳಲಿದರೆ ನಿದ್ದೆ ಮಾಡು!
ನೆರೆಮೀವ ಮಿತ್ರನೈ.
ಜೊತೆ ದುಡಿವ ಪುತ್ರನೈ.
ಯಜಮಾನನಿಗೆ ನೀನು ಹೊರೆಹೊರುವ ಕತ್ತೆಯೊಲು ದಾಸನಲ್ಲ!
ನಿನ್ನ ಸಾಹಸವೆಲ್ಲ
ಅವನದಲ್ಲದೆ ಇಲ್ಲ;
ಗುಡಿಯ ಕಟ್ಟುವರೂ ಕಡೆಗೆ ದೇವರಹರಿದಕೆ ಮೋಸವಿಲ್ಲ!
ನಾಕ ನರಕಗಳೆಲ್ಲ
ಪಾಪ ಪುಣ್ಯಗಳೆಲ್ಲ
ನಮ್ಮಾಶೆ ಭಯಗಳಲಿ ನಿಂತಿಹವು ತಮಗಿರದ ಕಾಲನೂರಿ!
ಒಂದು ಕಲ್ಲನು ಕಡೆದೆ;
ಏನೊ ತಪ್ಪಿದೆ; ಒಡೆದೆ!
ಬಿಸುಡದನು, ಓ ಶಿಲ್ಪಿ; ಮತ್ತೊಮ್ಮೆ ಯತ್ನಗೈ; ಅದುವೆ ದಾರಿ!
ತಪ್ಪಿದರೆ ಏನೊರ್ಮೆ?
ಅನುಭವಕೆ ಅದೆ ಪೆರ್ಮೆ!
ತಪ್ಪಿದರೆ ತಪ್ಪಿಲ್ಲ; ತಪ್ಪಿನೊಳಳುಕಿ ನಿಲ್ಲಲದುವೆ ಪಾಪ!
ಬೀಳುವುದು ಹರಿವ ಹೊಳೆ;
ಅದಕಿಹುದೆ ಕೊಳದ ಕೊಳೆ?
ನೀರು ನಿಲ್ಲದೆ ಹರಿಯೆ ನಿರ್ಮಲದ ಗಂಗೆ: ನಿಲೆ ಮಲದ ಕೂಪ!
ಕಡಲ ಕಡೆಯಲು ಬೆದರೆ
ನಿನಗೆ ಮರಣವೆ ಮದಿರೆ!
ಕಡಲ ಕಡೆ, ಸುಧೆಯ ಕುಡಿ; ಹರಿಹರರ ಮೀರಿ ಚಿರಜೀವಿಯಾಗು!
“ನಂಜುದಿಸಲೇನು ಗತಿ?”
ಅಂಜುವರೆ ಹ್ರಸ್ವಮತಿ?
ಅವನಿರುವುದದೆ ಕೆಲಸಕಾಗಿ; ನಂಜುಂಡನನು ಕರೆದು ಕೂಗು!
ಮುನ್ನೇಕೆ ಬಂದೆಯೋ?
ಇನ್ನಾವ ಮುಂದೆಯೋ?
ಆ ಮೂಲಚೂಲದಲಿ ಕಾಲಹರಣವ ಮಾಡಲಿಹುದೆ ಹೊತ್ತು?
ಯಾತ್ರೆಗೈತಂದಿರುವೆ;
ಹೊರೆ ಹೊತ್ತು ನೊಂದಿರುವೆ;
ನೋಡಿದರೆ ಹಾದಿಯನು ಗುರಿ ದೂರವೆಂಬುದೂ ನಿನಗೆ ಗೊತ್ತು.
ಇಂತಿರಲು ವಾದದಲಿ,
ತಾರ್ಕಿಕರ ಮೋದದಲಿ,
ನನ್ನಿಯನು ಮುಟ್ಟಿನೋಡದೆ ಮಾತಿನೊಳೆ ಕಟ್ಟುವವರ ಕೂಡೆ
ಹೊತ್ತು ಕಳೆಯುವುದೇಕೆ?
ಸಾಧಕನೆ, ಬಲು ಜೋಕೆ!
ಮಾಯೆಗಿಮ್ಮಡಿಮಾಯೆ ವಾದವೆಂಬುವ ಮಾಯೆ, ತಿಳಿದುನೋಡೆ!
ಬರಿಯ ನಂಬುಗೆ ಬೇಡ,
ಬರಿಯ ಸಂಶಯ ಬೇಡ,
ಹಿಂದನೂ ತೊರೆಯದೆಯೆ, ಇಂದನೂ ಮರೆಯದೆಯೆ ತೆರಳು ಮುಂದೆ.
“ಅವರಿವರ ಮತವಿರಲಿ,
ನನ್ನ ಪಥ ನನಗಿರಲಿ.”
ಎಂದದನು ಕಂಡುಕೊಳ್ವನೆ ಜಾಣನುಳಿದವರು ಕುರಿಯ ಮಂದೆ!
ಕಣ್ ಮುಚ್ಚಿ ನಡೆಯದಿರು;
ಹೃದಯವನು ಕಡಿಯದಿರು;
ಕಾಶಿಯಲಿ ನೀನರಿವೆ ಯಾತ್ರೆಯೇ ತೀರ್ಥಕಿಂ ಶ್ರೇಷ್ಠವೆಂದು.
ಯಾತ್ರೆಗಾಗಿಯೆ ಕ್ಷೇತ್ರ,
ಇದು ಸತ್ಯತಮ ಸೂತ್ರ.
ಸಾಧಕಗೆ ತಿಳಿಯುವುದು ತುದಿಯಲ್ಲಿ ಸಾಧನೆಯೆ ಸಿದ್ಧಿ ಎಂದು!
ಅದರಿಂದೆ ದಾರಿಯೆಡೆ
ಚೆಲುವಿರಲು ನೋಡಿ ನಡೆ;
ಗಾನವಿರೆ ಆಲೈಸು, ಕಲೆಯಿರಲು ಓಲೈಸು ಸಡ್ಡೆಯಿಂದೆ.
ಮೂಡೆ ನೇಸರು ನೋಡು,
ನಾಡ ಬಣ್ಣಿಸಿ ಹಾಡು,
ಹಾಡಿ ಮುದವನು ಹೀರಿ, ಜನಕೆ ಹರುಷವ ಬೀರಿ ತೇಲು ಮುಂದೆ.
ಹಾಡು ಗೆಳೆಯನೆ, ಹಾಡು.
ಹಾಡಿನಿಂದಲೆ ನಾಡು
ಕಣ್ದೆರೆದು ನೆಚ್ಚುದಿಸಿ ಕೆಚ್ಚಿನಿಂ ನಿನ್ನ ಹಿಂಬಾಲಿಪಂತೆ!
ಹಾಡೆ ಬಾಳಿಗೆ ಭಕ್ತಿ,
ಹಾಡೆ ಜೀವಕೆ ಶಕ್ತಿ;
ಹಾಡು, ಜನ್ಮದ ಭಾರವಳಿದು ಕರ್ಮದ ಹೊರೆಯು ಕರಗುವಂತೆ!
ದಾರಿಯಲಿ ಕೊಳದ ಬಳಿ
ತೆರೆಗಳಲಿ ಮಿಂದು ನಲಿ;
ತಿಳಿನೀರನೀಂಟಿ ತಂಗಾಳಿಯಲಿ ಮೈಯೊಡ್ಡಿ ಕಳೆ ದಣಿವನು.
ಹೊಂದಾವರೆಯ ಕೊಯ್ದು
ಚಂದದಿಂದಲಿ ನೆಯ್ದು
ನಿನ್ನೊಲ್ಮೆಗಣ್ಗದನು ಮುಡಿಸಿ ಮುದ್ದಿಸಿ ನಲಿಸಿ ಪಡೆ ತಣಿವನು.
ಹಾದಿಯಲಿ ಹಳ್ಳವಿದೆ,
ಮುಳ್ಳಿಡಿದ ಕೊಳ್ಳವಿದೆ,
ಎಂದಳುಕಿ ಹಿಂದೆಗೆಯದಿರು; ಮುಂದೆ ತೋರುವುದು ಹೂದೋಟವು!
ಯಾತ್ರಿಕರು ನಿನ್ನಂತೆ
ಹೋದಹರಿಹರು ಮುಂತೆ;
ಹುಡುಕವರ ಹಜ್ಜೆಯನು; ಕಾಣುವುದು ನೆಚ್ಚಿನಾ ಸವಿನೋಟವು!
ಕತ್ತಲೆಯು ಕವಿದು ಬರೆ
ಬಿತ್ತರಿಸಿ ಕಣ್ಣುತೆರೆ;
ರಂಜಿಪುದು ಮುಂದೆ ತೆರಳಿದ ಮಲ್ಲರಾಂತಿರುವ ದಿವ್ಯಜ್ಯೋತಿ!
ಮೇಣವರ ಕೂಗಿ ಕರೆ:
ಕೇಳಿಸಲು ನಿನ್ನ ಮೊರೆ
ನಿಲ್ಲುವರು; ಹಿಂದಿರುವ ಸೋದರರ ಕರೆದೊಯ್ವುದವರ ನೀತಿ!
ನೆಚ್ಚಿರಲಿ! ಕೆಚ್ಚಿರಲಿ!
ಮುಂಬರಿವ ಹುಚ್ಚಿರಲಿ!
ಮುಂದುವರಿವುದೆ ಬಾಳು; ಹಿಂದೆ ಸರಿವುದೆ ಸಾವು, ಆತ್ಮಹತ್ಯ!
ಹೋರುವುದೆ ಚೈತನ್ಯ,
ಸುಮ್ಮನಿರೆ ಜಡಶೂನ್ಯ!
ತುದಿಯ ಗುರಿ ಶಾಂತಿ ಎನೆ ಬರಿನಿದ್ದೆಯಲ್ಲವದು ಸತ್ಯ ಸತ್ಯ!
ಎದೆಯ ಕೊರೆಯುವ ಕೀಟ
ಸಂದೇಹದೊಡನಾಟ;
ಸಕ್ಕರೆಯು ಸಿಹಿಯೊ ಕಹಿಯೋ ತಿಂದು ನೋಡದೆಯೆ ತಿಳಿವುದೆಂತು?
ಹಿರಿಯರನುಭವ ಸಿಹಿಯೆ!
ನಿನಗೊಬ್ಬನಿಗೆ ಕಹಿಯೆ?
ಒಲಿಯದುಳಿವುದಕಿಂತಲೂ ಒಲಿದಳಿವುದೆ ಮೇಲಲ್ತೆ, ಜಂತೂ?
“ಮುಂದೆ ಬರಿ ಸೊನ್ನೆಯಿರೆ?”
ಮರುಳೆ, ಹಾಗೆನ್ನುವರೆ?
ಹಿಂದೆ ಬರಿಸೊನ್ನೆ, ಮುಂದೆಯು ಸೊನ್ನೆ, ನೀಂ ಮಾತ್ರ ಸೊನ್ನೆಯಲ್ಲ?
ಹೇಡಿಗಳ ವಾದವಿದು,
ಕುಮತಿಗಳ ಬೋಧವಿದು!
ಸೊನ್ನೆಯಿದ್ದರು ಇರಲಿ! ನುಗ್ಗಿ ಮುಂದಕೆ ನೋಡು! ನೀನು ಮಲ್ಲ!
“ಮುಂದೆ ತಾನಹೆ ಸೊನ್ನೆ”
ಎಂಬನಿಂದೂ ಸೊನ್ನೆ!
ಯಾವ ಸಂಖ್ಯೆಯನೇನು ಸೊನ್ನೆಯಿಂ ಗುಣಿಸಿದರೆ ಲಭ್ಯ ಸೊನ್ನೆ:
ಹಿಂದಿಲ್ಲದಾವಿಂದು?
ಇಂದಿಲ್ಲದೇಂ ಮುಂದು?
ಇಂದೆಂಬುದೆಂತಿರುವುದಿಲ್ಲವಾದರೆ ದಿಟದಿ ನಾಳೆ ನಿನ್ನೆ?
ಗುರಿಗೆಂದೆ ಮುಂಗಂಡು
ಹುಡುಗನೊದೆದಾ ಚೆಂಡು
ಹರಿದಾಡಲಾಡುಂಬೊಲದೊಳದಕೆ ಗುರಿಯಿಲ್ಲವೆಂಬೆಯೇನು?
ಇರುವಂತೆ ಬಿದಿಯ ಬಗೆ
ತಿರುತಿರುಗಿ ತಿರೆಯೊಳಗೆ
ಇಂದೊ ನಾಳೆಯೊ ಎಂದೊ ಒಂದು ದಿನ ಗುರಿಮುಟ್ಟಿ ಗೆಲುವೆ ನೀನು.
ಕರ್ಮ ನಿನ್ನನು ಕಟ್ಟಿ
ಕೆಡಹಲದನೇ ಮೆಟ್ಟಿ
ಮುಂದೆ ಮೆಟ್ಟಲನೇರು! ಮರಳಿ ಯತ್ನವ ಮಾಡು ಸತ್ತು ಹುಟ್ಟಿ!
ಹಚ್ಚು, ಬೆಂಕಿಯ ಹಚ್ಚು!
ಸುಡಲೆಲ್ಲವನು ಕಿಚ್ಚು!
ಹುಲ್ಲು ಸುಟ್ಟರೆ ಸುಡಲಿ! ಲೇಸಾಯ್ತು ಟೊಳ್ಳಳಿಯುತುಳಿಯೆ ಗಟ್ಟಿ!
ಬಾಳು ಸಂದೊಡಮೇನು?
ಸಾವು ಬಂದೊಡಮೇನು?
ಸಾವು ಬಾಳಿನ ಕುಂದನೊಂದರಿಯದಿಹ ಶಾಶ್ವತಾತ್ಮ ನೀನು!
ರವಿ ಮುಳುಗಲೇನಂತೆ?
ಇರುಳಿಳಿದರೇನಂತೆ?
ಬಂದಿರುಳಿನುದರದಲಿ ಮಲಗಿಹುದು ಮುಂದೆ ಬಹ ಹಗಲು ತಾನು!
ಹಗಲು ಹೊಣೆ ಹತ್ತಿರಕೆ;
ಹೊಣೆಯಿರುಳು ಬಿತ್ತರಕೆ;
ಹಗಲೆಮಗೆ ತೋರದಿಹ ಹಿರಿಯ ವಿಶ್ವವನಿರುಳು ತೋರುತಿಹುದು!
ಬಾಳು ಮುಚ್ಚುವ ಮಣ್ಣು;
ಸಾವು ಬಿಚ್ಚುವ ಕಣ್ಣು;
ಇಲ್ಲಿ ಕಂಡರಿಯದಿಹ ಮಹಿಮೆಯನು ನಾವಲ್ಲಿ ಕಾಣಲಹುದು!
ಸೂರ್ಯ ಚಂದ್ರರ ಗತಿಗೆ
ಕಣ್ಣಹ ಜಗನ್ಮತಿಗೆ
ನಿನ್ನ ಗತಿ, ನಿನ್ನ ಮತಿ, ನಿನ್ನ ಸಾಹಸಕೆ ಕಣ್ಣಾಗಲರಿದೇ?
ಭಯವ ಬಿಡು; ನಲವಿಂದೆ
ಹಾಡುತ್ತೆ ನಡೆ ಮುಂದೆ.
ಸಂದೆಯದ ಪುಸಿತೊಟ್ಟಿಲನು ಕಟ್ಟಿ, ಮಲಗಿ ಜೋಲದಿರು ಬರಿದೆ!
ಬೈಗುಗೆಂಪುರಿಯಲ್ಲಿ
ಸುಡಲಿ ಸಂಶಯವಲ್ಲಿ!
ಹುಣ್ಣಿಮೆಯ ರಾತ್ರಿಯಲಿ ಹೊರಗೆ ಬಾ ನೋಡು! ಸಂದೆಯದ ಮಚ್ಚು
ಎಲ್ಲಾದರಿಹುದೇನು?
ಎಳ್ಳಾದರಿಹುದೇನು?
ಜಗದ ನಗೆವೊನಲಿನಲಿ ಕೊಚ್ಚಿಹೋಗುವುದು ಸಂದೆಗದ ಹುಚ್ಚು!
ಏಳು, ಮಲ್ಲನೆ, ಏಳು!
ಮನವ ಮುದದಲಿ ತೇಲು!
ಕೋಗಿಲೆಗಳುಲಿಯುತಿವೆ ಪಲ್ಲವಿತ ಚೈತ್ರಕಾನನದಿ ಕೇಳು:
ಸಾಹಸವೆ ಸವಿ ಬಾಳು!
ಸಂದೆಹವೆ ಕಹಿ ಕೂಳು!
ನಂಬುಗೆಯ ಸುಗ್ಗಿಯನು ನೆಟ್ಟು ಸಂದೆಯದ ಮಾಗಿಯನು ಕೀಳು!
ನೋಡು ಎಂತಿದೆ ಸುಸಿಲು!
ಹಸುರ ಮೇಲೆಳಬಿಸಿಲು
ಮಲಗಿಹುದು ಲೀಲೆಯಲಿ ಮೈಮರೆತ ಮೋಹನದ ಶಿಶುವಿನಂತೆ!
ಅಲ್ಲಿ ಬನಬನದಲ್ಲಿ,
ಮಾನವರ ಮನದಲ್ಲಿ
ನೆಚ್ಚುದಿಸಿ ಚಿಮ್ಮುತಿದೆ! ಕರ್ಮಮಯ ಚೇತನಕೆ ಹೊರತು ಚಿಂತೆ!
ನಂಬು ಗುರಿಯಿಹುದೆಂದು!
ನಂಬು ಗುರುವಿಹನೆಂದು!
ನಂಬು ದಾರಿಯಲಿ ಕೃಪೆ ಕೈಹಿಡಿದು ಹಿಂದೆ ಪಾಲಿಸುವುದೆಂದು!
ಗುರುಭಕ್ತ ನಾನೆಂದು,
ಗುರುಶಕ್ತಿ ನನಗೆಂದು
ನಂಬು! ನಿನ್ನನೆ ನಂಬು! ಮಂತ್ರದೀಕ್ಷಿತಗೆ ಗುರಿತಪ್ಪದೆಂದೂ!

 ಆಷಾಢ ಸೂರ್ಯೋದಯ

ಹೊಳೆವ ಚಿನ್ನದ ಗಿಂಡಿಯನು ಕೈಲಾಂತು ಬಾನ ಕರೆಯಲಿ ನಿಂತು ನಲಿಯುವ ಮೂಡಣದ ದೆಸೆವೆಣ್ಣು, ಮೆಲ್ಲನೆಚ್ಚರುವ ತಿರೆವೆಣ್ಣಿನ ಹಸುರುಡೆಯ ಮೇಲೆ ಚಿಮುಕಿಸುತ್ತಿಹಳು ಹೊನ್ನೀರಿನೋಕುಳಿಯ. ಇಬ್ಬನಿಕೋದ ನೆಲದ ಹಸುರು ತಣ್ಣನೆ ತೀಡುವ ತಂಗಾಳಿಯಲ್ಲಿ ಅತ್ತ ಇತ್ತ ಒಲೆಯುತ್ತ ಹೊಂಬಿಸಿಲಲಿ ಜರತಾರಿಯಂತೆ ಮಿರುಗುತ್ತಿದೆ.

ಹಸುರ್‌ತಳಿರು ಮುದ್ದೆಮುದ್ದೆ ಕಿಕ್ಕಿರಿದ ಮರಗಳಲ್ಲಿ ಹುದುಗಿಕೊಂಡು ಹುಚ್ಚುಹಿಡಿದ ಕೋಗಿಲೆಗಳು ಹುಚ್ಚೆಲ್ಲ ಹಾಡಾಗಿ ಹರಿಯುವಂತೆ ಇಂಚರ ಗೈಯುತಿವೆ. ಕೋಗಿಲೆಗಳ ಇನಿಗೊರಲಿಂದ ಕಾಮನ ಬಿಲ್ಲುಗಳು ಹೊರ ಹೊಮ್ಮುತಿವೆ. ಕಿವಿ ಕಣ್ಣಾಗುತಿದೆ; ದನಿ ಬಣ್ಣವಾಗುತಿದೆ. ಭೂಮಿ ಆಕಾಶಗಳು ರೋಮಹರ್ಷಣದಿ ನಲಿಯುತ್ತಿವೆ.

ಮಳೆಯಿಂದ ತಿಳಿಯಾದ ಆಷಾಢದ ವಾಯುಮಂಡಲದಲ್ಲಿ ನೀರೊಡಲ ಮೋಡಗಳು ವಿಕಟಾಕಾರವಾಗಿ ಸುತ್ತುತ್ತಿವೆ. ಮಾಡಿದ ಮಾಡುವ ಕೆಲಸಗಳ ನಡುವೆ ಬೇಸರ ಕಳೆಯಲು ನಿಲ್ಲುವ ಕೆಲಸಗಾರನಂತೆ ಸುಮ್ಮನೆ ಕನಸಿನಲಿ ತೇಲುತ್ತಿವೆ. ಅವುಗಳಿಗೆ ಎದುರಾಗಿ ದೂರದಲಿ ಬೆಳ್ಳಕ್ಕಿ ಸಾಲ್ಗೊಂಡು ಹಾರುತ್ತಿವೆ, ಮುಕ್ತಿಗೇರುವ ಶುಭ್ರ ಜೀವರುಗಳಂತೆ, ಧವಳಪಂಕ್ತಿಯಲಿ.
ಹಸುರು ನೆಲದಲಿ ಹಾವಿನಂತೆ ಕೊಂಕಿ ಹರಿಯುವ ಕೆಂದೂಳಿಯ ಹೆದ್ದಾರಿಯ ಬಳಿ, ಸಾಲ್ಗೊಂಡು ಬೆಳೆದಿರುವ ಬಿದಿರ್‌ಮಳೆಗಳಲಿ, ನೆರೆದಿದೆ ಹಾಡುವ ಹಕ್ಕಿಗಳ ಪರಿಷತ್ತು. ಅವುಗಳೆಲ್ಲ ತುದಿಮೊದಲಿಲ್ಲದ ಬೇಸರವರಿಯದ ಅನಂತಗಾನದ ಆಲಾಪನೆಯಲ್ಲಿ ತೊಡಗಿವೆ. ಬಯಲ ಹಸುರಿನಲ್ಲಿ ಕುಪ್ಪಳಿಸುತ್ತಿವೆ ಪುರುಳಿಹಕ್ಕಿ.

ತುಂಬಿದ ಕೆರೆಯ ಕೆಮ್ಮಣ್ಣು ಬಣ್ಣದ ನೀರಿನ ಅಲೆಗಳು ಹಸುರಾದ ಅಂಚನು ಅಪ್ಪಳಿಸಿ ಸರಸವಾಡುತಿವೆ. ಬೆಳೆಯುತಿರುವ ಜೋಳದ ಹೊಲಗಳು ಉದಯ ವನಿತೆಯನ್ನು ಕೈಬೀಸಿ ಕರೆಯುತ್ತಿವೆ.
ಸ್ವರ್ಗ ತಾನೀ ಪುಣ್ಯಸುಂದರ ಆಷಾಢ ಸೂರ್ಯೋದಯವನು ಪ್ರಾತಃ ಸೂರ್ಯಬಿಂಬದ ಹೊಂಬಟ್ಟಲಲಿ ತುಂಬಿ ಭೂಮಿಗೆ ನಿವೇದಿಸಿದೆ. ಅದಕ್ಕೆ ಇದರಲ್ಲಿರುವ ಪ್ರೇಮದ ಸಾಕ್ಷಿಯಿದು. ಅದರನುರಾಗದ ಇದರುಪಭೋಗದ ಪ್ರತಿನಿಧಿಯಿದು.

ಇದೋ, ನೀನು ಆಷಾಢ ಸೂರ್ಯೋದಯವನು ಚಿನ್ನದ ತಟ್ಟೆಯಲಿಟ್ಟು ನನಗೆ ದಾನಮಾಡಿರುವಂತೆ, ನಾನು ನನ್ನನು ನನ್ನ ಪ್ರೇಮದಲಿಟ್ಟು ನಿನಗೆ ನಿವೇದಿಸಿಕೊಳ್ಳುವೆ.
ನನ್ನದು ಇದೊಂದೆ ಬಿನ್ನಹ: ನನ್ನನೂ ಒಂದು ಆಷಾಢ ಸೂರ್ಯೋದಯವನ್ನಾಗಿ ಮಾಡಿ ಇನ್ನಾವುದಾದರೊಂದು ಲೋಕದ ಇಂತಹ ರಮಣೀಯ ಪ್ರಾತಃಕಾಲದ ಇಂತಹ ಅತುಲ ಐಶ್ವರ್ಯಕ್ಕೆ ನಿವೇದಿಸುವೆಯಾ?

ಪ್ರಾಚೀನ ಕರ್ನಾಟಕದ ಅಳತೆ, ತೂಕ ಹಾಗೂ ಮಾಪನಗಳು

ಕರ್ನಾಟಕದ ಸಾವಿರಾರು ಕನ್ನಡ ಶಾಸನಗಳು ವಿವಿಧ ಅಳತೆ-ತೂಕ, ಮಾಪನಗಳನ್ನು ಕುರಿತು ಉಲ್ಲೇಖೀಸುತ್ತವೆ. ಆರ್. ಜಗದೀಶ ಅವರ ‘ಪ್ರಾಚೀನ ಕರ್ನಾಟಕ ಅಳತೆ ಮಾನಗಳು’ ಕೃತಿಯನ್ನು ಹೊರತುಪಡಿಸಿದರೆ ಒಂದರೆಡು ಬಿಡಿಲೇಖನ ಇವುಗಳನ್ನು ಬಿಟ್ಟರೆ ಹೆಚ್ಚು ಅಧ್ಯಯನಗಳು, ಸಂಶೋಧನೆಗಳು ನಡೆದಿಲ್ಲ. ಭೂಮಿಯ ಅಳತೆ, ನೀರಿನ ಅಳತೆ, ಧಾನ್ಯಗಳು ಇತ್ಯಾದಿಗಳನ್ನು ಅಳತೆ ಮಾಡಲು ಅನೇಕ ಬಗೆಯ ತೂಕ ಮತ್ತು ಮಾಪನಗಳನ್ನು ಪ್ರಾಚೀನರು ಬಳಸುತ್ತಿದ್ದುದುಂಟು. ಅವು ಕಾಲದಿಂದ ಕಾಲಕ್ಕೆ, ರಾಜರಿಂದ ರಾಜರಿಗೆ, ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸದಿಂದ ಕೂಡಿರುತ್ತಿದ್ದವು.
ಹೊಲಗಳನ್ನು ಅಳತೆ ಮಾಡಲು, ಭೂಮಿಯನ್ನು ಅಳತೆ ಮಾಡಲು, ಬೀಜವನ್ನು ಅಳತೆಮಾಡಲು ವಿವಿಧ ರೀತಿಯಾದ ಅಳತೆ ಕೋಲುಗಳು ಬಳಕೆಯಲ್ಲಿದ್ದವು. ಉದಾ: ವ್ಯವಹಾರ ಗಣಿತ ಮತ್ತು ಕ್ಷೇತ್ರ ಗಣಿತಗಳ ಕರ್ತೃವಾದ ರಾಜಾಧಿತ್ಯನು ಹೊಲಗಳನ್ನು ಅಳೆಯಲು ‘ಗಳೆ’ಗಳನ್ನು ಬಲಸಬೇಕೆಂದು ಹೇಳುತ್ತಾನೆ. ಇದು ಊರು, ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತಿತ್ತು. ರಾಜನಿಂದ ರಾಜರಿಗೂ, ಕಾಲದಿಂದ ಕಾಲಕ್ಕೆ ಬದಲಾವಣೆಯಿಂದ ಕೂಡಿರುತ್ತಿತ್ತು. ಕುರುಗೋಡಿನ ಶಾಸನವೊಂದು ಹೇಳುವ ಹಾಗೆ ‘೧೮ ಗೇಣು’ ಹೊಂದಿರುವ ಕೋಲು ದೇವಸ್ಥಾನದಲ್ಲಿತ್ತು ಎಂದು ತಿಳಿಯುತ್ತದೆ. ಶಾಸನಗಳಲ್ಲಿ ಬೇರೆ ಬೇರೆ ಪ್ರಮಾಣದ ನೂರಾರು ರೀತಿಯ ಅಳತೆ ಕೋಲುಗಳ ಉಲ್ಲೇಖ ಸಿಗುತ್ತವೆ. ಉದಾ: ‘ಇರ್ಪ್ಪತ್ತೆಂಟು ಗೇಣುಗಳೆ,’ ‘ಐವತ್ತೆರಡು ಗೇಣುಗಳೆ’ ಇತ್ಯಾದಿ. ಇವುಗಳಿಗೆ ಬೇರೆ ಬೇರೆ ಹೆಸರುಗಳು ಇದ್ದದ್ದು ತಿಳಿದು ಬರುತ್ತದೆ. ಉದಾ: ಬಂಟರ ಭಾವನ ಕೋಲು, ಮಲೆಪರ ಮಾರಿಯ ಕೋಲ್ ಇದಲ್ಲದೆ ಮತ್ತರು ಕಂಬ, ಬೆದ್ದಲು, ನಿವರ್ತನ, ನಿರಾವರಿ ಇತ್ಯಾದಿ ಹೆಸರುಗಳು ಇದ್ದವು.

ಕಾಳು-ಕಡ್ಡಿ, ದವಸಧಾನ್ಯವನ್ನು ಅಳೆಯಲು ಉಪಯೋಗಿಸುತ್ತಿದ್ದ ವಸ್ತುಗಳ ದೊಡ್ಡ ಪಟ್ಟಿಯನ್ನು ನೀಡಬಹುದು. ಖಂಡುಗ, ಪಂಚಕ, ಕೊಳಗ, ಬಳ್ಳ, ಮಾನ, ಸೊಲಿಗೆ, ಭಾರ, ತೊಲ, ಬೀಸಗೆ, ಫಲ, ಕರ್ಷ, ದೇವಗೊಳಗ, ದಮಗೊಳಗ, ಜಕ್ಕಿಗೊಳಗ, ಧರ್ಮಗೊಳಗ, ಗಿದ್ದಿಗೆ, ಹಾಗೂ ಸುವರ್ಣ ಇತ್ಯಾದಿಯಾಗಿ ಬೆಳೆದುಕೊಂಡು ಹೋಗುತ್ತದೆ. ಇವುಗಳ ಬಳಕೆ, ಇವುಗಳ ಮೇಲಿನ ನಿಯಂತ್ರಣ ಅಥವಾ ಹತೋಟಿ, ಆಡಳಿತದ ನಿಯಂತ್ರಣ ಮುಂತಾದವುಗಳನ್ನು ಶಾಸನಗಳು ವಿಫುಲವಾಗಿ ತಿಳಿಸಿಕೊಡುತ್ತವೆ. ಇವುಗಳನ್ನು ಸಂಶೋಧಕರು ರಾಜರು, ಕಾಲಘಟ್ಟ ಪ್ರದೇಶಾವಾರು ಅಧ್ಯಯನ ಮಾಡಲು ಸಾಕಷ್ಟು ಅವಕಾಶವಿದೆ.

ಕದ್ರಿ ಗೋಪಾಲನಾಥ್

೬-೧೨-೧೯೫೦ ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸಮೀಪದ ಸಜೀಪಾ ಎಂಬಲ್ಲಿ ಗೋಪಾಲನಾಥ್ ಜನಿಸಿದರು. ಇದರ ಮೂಲಸ್ಥರಾದ ಹಿರಿಯರು ಕದ್ರಿಯವರಾದ್ದರಿಂದ ಇವರ ಹೆಸರಿನೊಂದಿಗೆ ಸೇರಿ ಕದ್ರಿ ಉಳಿದು ಬಂದಿದೆ. ಇವರ ಮನೆತನದ ಎಲ್ಲರೂ ನಾಗಸ್ವರ ವಿದ್ವಾಂಸರೇ. ಸೋದರ ಮಾವ ಸ್ಯಾಕ್ಸೋಫೋನ್ನುಡಿಸುವುದನ್ನು ಕೇಳಿ ಆಕರ್ಷಿತರಾದ ಕದ್ರಿ ಅವರಿಂದಲೇ ಸಂಗೀತದ ಓಂಕಾರ ಆರಂಭಿಸಿದರು. ಗೋಪಾಲಕೃಷ್ಣ ಅಯ್ಯರ್ ಅವರಲ್ಲಿ ಗಾಯನದ ಶಿಕ್ಷಣ ಪಡೆದುದನ್ನು ಸ್ಯಾಕ್ಸೋಫೋನ್ನಲ್ಲಿ ನುಡಿಸಿ ಅಭ್ಯಾಸ ಮಾಡುತ್ತಿದ್ದರು. ಹೀಗೆ ಸಾಧಿಸುತ್ತಿದ್ದ ಕದ್ರಿ ಮುಂದೆ ಮದರಾಸಿನಲ್ಲಿ ಟಿ.ವಿ. ಗೋಪಾಲಕೃಷ್ಣನ್ ಅವರಲ್ಲಿ ಗುರುಕುಲ ಪದ್ಧತಿಯಲ್ಲಿ ಕರ್ನಾಟಕ ಹಿಂದೂಸ್ಥಾನಿ ಸಂಗೀತ ಪದ್ಧತಿಗಳೆರಡನ್ನೂ ಅಭ್ಯಾಸ ಮಾಡಿದರು. ತಮ್ಮ ವಾದ್ಯದಲ್ಲಿ ಪ್ರಯೋಗ ಮುಂದುವರೆಸಿ ಪ್ರಾವೀಣ್ಯತೆ ಪಡೆದರು.

ಕರ್ನಾಟಕ ಶೈಲಿಯ ಗಮಕ ಜಾರುಸ್ವರಗಳು ಸುಲಭವಾಗಿ ಮೂಡುವಂತೆ ಉಪಕರಣದಲ್ಲಿ ಪ್ರಾಯೋಗಿಕ ಬದಲಾವಣೆಗಳನ್ನು ಆಳವಡಿಸಿದರು. ಭಾರತ ಹಾಗೂ ಪಾಶ್ಚಾತ್ಯ ವಾದ್ಯಗಳನ್ನು ಸೇರಿಸಿ ದಕ್ಷಿಣಾವಿಯರಾಗದಲ್ಲಿ ಪಲ್ಲವಿ ಸಂಯೋಜಿಸಿ ‘ಕರ್ನಾಟಕ ಜಾಜ್’ ಎಂಬ ಕಾರ್ಯಕ್ರಮಗಳನ್ನು ವಿದೇಶಗಳಲ್ಲಿ ನೀಡಿದರು. ದೇಶದ-ಹೊರ ದೇಶಗಳ ಎಲ್ಲಾ ಪ್ರಮುಖ ಕೇಂದ್ರಗಳಲ್ಲೂ, ನಗರಗಳಲ್ಲೂ ಅಸಂಖ್ಯಾತ ಕಛೇರಿಗಳನ್ನು, ಪ್ರಾತ್ಯಕ್ಷಿಕೆಗಳನ್ನು ಸಂಗೀತ ಕಾರ್ಯಗಾರಗಳನ್ನೂ ನಡೆಸಿರುವ ಕೀರ್ತಿ ಇವರದು.

ಅನೇಕಾನೇಕ ಸ್ವದೇಶಿ, ವಿದೇಶಿ ಶಿಷ್ಯರಿಗೆ ತರಬೇತಿ ನೀಡುತ್ತಿರುವ ಕದ್ರಿ ಸ್ಯಾಕ್ಸೋ ಫೋನ್  ಕಲಾವಿದನ ಬದುಕನ್ನು ಆಧರಿಸಿ ತೆಗೆದ ಚಿತ್ರದಲ್ಲಿ ಸಂಪೂರ್ಣ ತಾವೇ ವಾದ್ಯ ನುಡಿಸಿದ್ದರು. ಈ ಚಿತ್ರದ ಹಾಡುಗಳು ಬಹು ಜನಪ್ರಿಯವಾದುವು. ಇವರ ಪ್ರತಿ ಕಛೇರಿಗೂ ಉತ್ತಮ ವಿಮರ್ಶೆ ಪ್ರತಿಕ್ರಿಯೆಗಳು ದೊರೆತು ಒಂದು ವಿದೇಶಿ ವಾದ್ಯ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಭದ್ರಸ್ಥಾನ ಪಡೆಯಲು ಸಾಧ್ಯವಾಯಿತು.

ಭಿನ್ನ ಪ್ರಯೋಗಗಳಲ್ಲಿ ನಿರತರಾಗಿರುವ ಕದ್ರಿ ಕಂಚಿ ಹಾಗೂ ಶೃಂಗೇರಿ ಶಂಕರಾಚಾರ್ಯ ಸಂಸ್ಥಾನಗಳ ಆಸ್ಥಾನ ವಿದ್ವಾಂಸರು. ಎಲ್ಲೆಡೆಯೂ ಪ್ರತಿಷ್ಠಿತ ಸಭೆ-ಸಂಸ್ಥೆ-ಸಂಘಗಳಿಂದ ಅಸಂಖ್ಯ ಪ್ರಶಸ್ತಿ ಗೌರವ ಸನ್ಮಾನಗಳನ್ನು ಸಂಪಾದಿಸಿರುವ ಶ್ರೀಯುತರು ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪುರಸ್ಕಾರ ‘ಪದ್ಮ’ ಪುರಸ್ಕಾರಗಳನ್ನೂ ಪಡೆದಿದ್ದಾರೆ.

No comments:

Post a Comment